article

ಭಾರತ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್ ಪಕ್ಷ ಎಂದು ಸಾಮಾನ್ಯವಾಗಿ ಕರೆಯುವುದು) ಭಾರತದಲ್ಲಿ ಇಂದು ಇರುವ ರಾಜಕೀಯ ಪಕ್ಷಗಳಲ್ಲಿ ಅತ್ಯಂತ ಹಳೆಯದು, ಮತ್ತು ಅತ್ಯಂತ ದೊಡ್ಡ ರಾಜಕೀಯ ಪಕ್ಷಗಳಲ್ಲಿ ಒಂದು. ೧೪ ನೆಯ ಲೋಕ ಸಭೆಯಲ್ಲಿ (೨೦೦೪-೨೦೦೯) ೧೪೫ ಸ್ಥಾನಗಳನ್ನು ಹೊಂದಿದ್ದು ಸದ್ಯಕ್ಕೆ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿ ಸ್ವತಂತ್ರ ಭಾರತದಲ್ಲಿ ಅತಿ ಹೆಚ್ಚು ಕಾಲ ಅಧಿಕಾರದಲ್ಲಿ ಇದ್ದಿರುವ ಪಕ್ಷ. ಸದ್ಯಕ್ಕೆ ಎಡಪಂಥೀಯ ಪಕ್ಷಗಳಿಂದ ಬೆಂಬಲಿತವಾಗಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರದ ಮುಖ್ಯ ಪಕ್ಷ.

ಚರಿತ್ರೆ


ಸ್ವಾತಂತ್ರ್ಯಪೂರ್ವ

ಭಾರತ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸುಶಿಕ್ಷಿತ ಭಾರತೀಯರಿಗೆ ಸರ್ಕಾರದಲ್ಲಿ ಹೆಚ್ಚಿನ ಅವಕಾಶ ಸೃಷ್ಟಿಸುವ ಉದ್ದೇಶದೊಂದಿಗೆ ೧೮೮೫ ರಲ್ಲಿ ಸ್ಥಾಪಿಸಲಾಯಿತು. ಪ್ರಾರಂಭಿಕ ಹಂತದಲ್ಲಿ ಕಾಂಗ್ರೆಸ್ ಬ್ರಿಟಿಷ್ ಆಡಳಿತಕ್ಕೆ ವಿರೋಧಿಯಾಗಿರಲಿಲ್ಲ. ಇದರ ಮೊದಲ ಸಭೆ ಸ್ಕಾಟ್ಲೆಂಡ್ ನ ಅಲನ್ ಆಕ್ಟೇವಿಯನ್ ಹ್ಯೂಮ್ ಎಂಬವರಿಂದ ಆಗಿನ ವೈಸ್-ರಾಯ್ ಆದ ಲಾರ್ಡ್ ಡಫರಿನ್ ಅವರ ಅನುಮತಿಯೊಂದಿಗೆ ವ್ಯವಸ್ಥೆಯಾದದ್ದು. ಆದರೆ ನಂತರದ ವರ್ಷಗಳಲ್ಲಿ ಬ್ರಿಟಿಷ್ ಸರ್ಕಾರದಿಂದ ಹೆಚ್ಚು ಪ್ರತಿಕ್ರಿಯೆ ಕಾಣದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಾರಂಭಿಸಿತು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿದ್ದವು: ಗರಂ ದಳ ಮತ್ತು ನರಂ ದಳ; ಬ್ರಿಟಿಷರ ಕಡೆಗೆ ಕಾಂಗ್ರೆಸ್ ನಾಯಕರು ತಾಳುತ್ತಿದ್ದ ನಿಲುವಿನ ಮೇಲೆ ಈ ವರ್ಗೀಕರಣ ಆಧರಿತವಾಗಿದೆ. ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯಪೂರ್ವ ನಾಯಕರಲ್ಲಿ ಮಹಾತ್ಮಾ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ ರನ್ನು ಹೆಸರಿಸಬಹುದು.

ಸ್ವಾತಂತ್ರ್ಯಾನಂತರ

ಅನೇಕರ ಹೇಳಿಕೆಯಂತೆ, ಗಾಂಧೀಜಿಯವರ ಅಭಿಪ್ರಾಯದ ಪ್ರಕಾರ ಕಾಂಗ್ರೆಸ್ ಪಕ್ಷದ ಉದ್ದೇಶ ಸ್ವಾತಂತ್ರ್ಯದ ಗಳಿಕೆ ಮತ್ತು ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷವನ್ನು ಮುಚ್ಚಬೇಕೆಂದಿದ್ದಿತು. ಆದರೆ ಸ್ವಾತಂತ್ರ್ಯದ ನಂತರ ಅನೇಕ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿತ್ತು. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷದ ಇತರ ನಾಯಕರೆಂದರೆ ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾ ಗಾಂಧಿ, ಪಿ ವಿ ನರಸಿಂಹರಾವ್ ಮತ್ತು ಇತರರು. ೮೦ ರ ದಶಕದ ನಂತರ ಮುಖ್ಯ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ (ಐ) ಎಂಬ ಹೆಸರು ಬಂದಿತು - ಐ ಎಂಬುದು 'ಇಂದಿರಾ' ಎಂಬುದನ್ನು ಸೂಚಿಸುತ್ತದೆ. ಕಾಂಗ್ರೆಸ್ ಪಕ್ಷ ಒಡೆದು ಬೇರೆ ಬೇರೆ ಪಕ್ಷಗಳಾದ ಮೇಲೆ ಬೇರೆ ಬೇರೆ ಪಕ್ಷಗಳನ್ನು ಗುರುತಿಸಲು ಈ ವಿಧಾನವನ್ನು ಉಪಯೋಗಿಸಲಾಗಿದೆ. ನಿಧಾನವಾಗಿ, ಅನೇಕ ರಾಜಕೀಯ ಪಕ್ಷಗಳು ಕಾಂಗ್ರೆಸ್ ಪಕ್ಷದಿಂದ ಒಡೆದು ಬಂದಿವೆ - ಇದರಿಂದಾಗಿ ೪೦ರ ದಶಕದಿಂದ ೬೦ ರ ದಶಕದವರೆಗೆ ಸುಲಭವಾಗಿ ಲೋಕಸಭೆಯ ಮೂರನೇ ಎರಡರಷ್ಟು ಸ್ಥಾನಗಳನ್ನು ಪಡೆಯುತ್ತಿದ್ದ ಕಾಂಗ್ರೆಸ್ ಪಕ್ಷದ ಶಕ್ತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕಾಂಗ್ರೆಸ್ ಪಕ್ಷದ ಪ್ರಸಕ್ತ ನಾಯಕರು ಸೋನಿಯಾ ಗಾಂಧಿ, ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಪತ್ನಿ. ಅವರ ವಿದೇಶಿ ಮೂಲ (ಅವರು ಇಟಲಿ ದೇಶದಲ್ಲಿ ಬೆಳೆದದ್ದು) ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡಂದಿನಿಂದಲೂ ಸಾಕಷ್ಟು ವಿವಾದಕ್ಕೆ ಎಡೆ ಮಾಡಿದೆ. ಸೋನಿಯಾ ಅವರನ್ನು ಭಾರತದ ಪ್ರಧಾನ ಮಂತ್ರಿಯನ್ನಾಗಿ ಚುನಾಯಿಸುವ ಪ್ರಸ್ತಾಪ ಬಂದಾಗಲೆಲ್ಲ ಈ ವಿವಾದ ತೀವ್ರವಾದದ್ದುಂಟು.

ಪ್ರಸಕ್ತ ಭಾರತ ಸರ್ಕಾರದ ರಚನೆ


೨೦೦೪ ರ ಚುನಾವಣೆಗಳಲ್ಲಿ ಕಾಂಗ್ರೆಸ್ ಮೈತ್ರಿತ್ವ ಬೇರೆ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿತು ಹಾಗೂ ಎಡಪಂಥೀಯ ಪಕ್ಷಗಳಿಂದ ಬೆಂಬಲವನ್ನು ಪಡೆಯಿತು. ಇದರಿಂದಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿದ್ದ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟ ಪದಚ್ಯುತವಾಯಿತು. ಇದರ ನಂತರ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ೧೯ ರಾಜಕೀಯಪಕ್ಷಗಳ ಮೈತ್ರಿಕೂಟ ಸೋನಿಯಾ ಗಾಂಧಿ ಅವರ ಹೆಸರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ಸೂಚಿಸಿತು. ಆದರೆ ಎಲ್ಲರಿಗೂ ಆಶ್ಚರ್ಯ ತಂದ ನಡೆಯಲ್ಲಿ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನವನ್ನು ನಿರಾಕರಿಸಿ ಗಣ್ಯ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ವಿತ್ತ ಸಚಿವರಾದ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ಸೂಚಿಸಿದರು. ಪ್ರಮಾಣವಚನ ಸಮಾರಂಭ ಮೇ ೨೨, ೨೦೦೪ ರಂದು ನಡೆಯಿತು.

ಇವನ್ನೂ ನೋಡಿ


ಭಾರತದ ರಾಜಕೀಯ ವ್ಯವಸ್ಥೆ

ಭಾರತದ ರಾಜಕೀಯ ಪಕ್ಷಗಳು

ಬಾಹ್ಯ ಅಂತರ್ಜಾಲ ಸಂಪರ್ಕಗಳು


ಕಾಂಗ್ರೆಸ್ ಪಕ್ಷ

ರಾಜಕೀಯ

Индийски национален конгрес | Kongresspartei | Indian National Congress | Parti du Congrès | インド国民会議 | Indias Nasjonale Kongress | Partido do Congresso | Индийский национальный конгресс | Kongresspartiet | இந்திய தேசிய காங்கிரஸ் | 印度国民大会党

 

This article is licensed under the GNU Free Documentation License. It uses material from the "ಕಾಂಗ್ರೆಸ್ ಪಕ್ಷ".

Home Pageartsbusinesscomputersgameshealthhospitalshomekids & teensnewsphysiciansrecreationreferenceregionalscienceshoppingsocietysportsworld